Saturday 9 March 2013

..ಹೀಗೂ ಒಂದು ಪ್ರೇಮ ಪತ್ರ....



ಪ್ರೀತಿಯೊಂದಿಗೆ ಪೂರ್ಣತೆ ತಂದವಳೇ ,



       ಅಪ್ಪ,ಅಮ್ಮ,ಕಸಿನ್ಸ್ ,ಫ್ರೆಂಡ್ಸ್ ಎಲ್ಲರೂ ಇದ್ದರೂ ಎನೋ ಒಂದು
ಕೊರತೆ ಇತ್ತು ಜೀವನದಲ್ಲಿ..ಕೇಕ್ ಮೇಲೆ ಚೆರ್ರಿ ಮಿಸ್ ಆದಂತೆ,ಕಾಫಿಯಲ್ಲಿ ಕೊಂಚ
ಸಕ್ಕರೆ ಕಡಿಮೆ ಇದ್ದಂತೆ,ಸಿಂಗರಿಸಿಕೊಂಡ ಹೆಣ್ಣು ಕುಂಕುಮವಿಡುವುದ ಮರೆತರೆ ಹೀಗೆ
ಏನೇನೊ ಅಪೂರ್ಣ...ನೀ ಬಂದಾಗ ಅದಕ್ಕೆಲ್ಲಾ ಪೂರ್ಣತೆ ಸಿಕ್ಕಂತೆ,ಜೀವನಕ್ಕೊಂದು ಅರ್ಥ
ಸಿಕ್ಕಿತು ನೀ ನನಗೆ ಸ್ವಂತವಾದ ದಿನವೇ...ನಾವಿಬ್ಬರು ಸೇರಿ ನಡೆಸಿದ ಜೀವನ ಸರಸ
-ವಿರಸಗಳೊಡನೆ  ನೀ ಕರೆಯುತ್ತಿದ್ದಾಗ ಒಮ್ಮೊಮ್ಮೆ ನನ್ನ 'ಜೀ' ಎಂದು, 'ವನ್' ಎಂಬುದು
ಇರದಿದ್ದರೂ ಜೀವನವೊಂತು ಸಂಪೂರ್ಣವಾಗಿತ್ತು...ಈಗ ನಿನ್ನ ಫೇವರೆಟ್ ಹಾಡು ಕೇಳುತ್ತಾ
ಇದ್ದೀನಿ,"ಖೋರ ಕಾಗಜ್ ಥಾ ಮನ್ ಮೇರ ..." ನೀ ನನಗಾಗಿ ಹಾಡುವಾಗೆಲ್ಲಾ ಇನ್ನೂ
ಮಧುರವಾಗಿ ಕೆಳುವುದೇನೂ ಎಂದೆನಿಸುತ್ತಿದೆ...ಇದೆಲ್ಲಾ ಯಾಕೆ ಈ ಪತ್ರದಲ್ಲಿ ಹೇಳ್ತಾ
ಇದ್ದೀನಿ ಅಂತ ಆಶ್ಚರ್ಯನಾ?? ಹೇಳ್ತೀನಿ ಅದಕ್ಕಿಂತ ಮುಂಚೆ ಕೇಳು, "ಇರುವಾಗ ಒಂದು
ಗುಲಾಬಿ ಕೊಡದೆ ನಾ ಹೋದಮೇಲೆ ಗೋರಿಗೆ ಹೂ-ಬೊಕ್ಕೆ ತಂದರೇನು ಫಲ"ಎಂದ್ಯಾರೋ ಅಂದಿದ್ದು
ಕೇಳಿ ನಾವಿಬ್ಬರು ಒಬ್ಬರನೊಬ್ಬರು ನೋಡಿ ಮೌನವಾಗಿ ತಿರುಗಿಕೊಂಡಿದ್ದು.ನೆನಪಿದಿಯಾ
ನಿನಗೆ ಅಂದೇ ನಾ ನಿನಗೆ ತಂದೆ  ಗುಲಾಬಿಯ ಬೊಕ್ಕೆ, ನೀನಾದರೋ ಇನ್ನೂ  ಬುದ್ದಿವಂತೆ
ಗುಲಾಬಿ ಗಿಡಗಳನ್ನೇ ತಂದು ಇಟ್ಟಿದ್ದೆ ಬಾಲ್ಕನಿಯಲ್ಲಿ... ಅಂದೇ ತಿಳಿದಿತ್ತು ಒಂದು
ದಿನದ ಹರ್ಷವಲ್ಲ ಪ್ರೀತಿ,ಪ್ರತೀದಿನ ಒಂದು ತಪ್ಪಿದರೆ ಮತ್ತೊಂದು ಹೂ ಬಿಡುವ
ಗಿಡವಾಗಬೇಕೆಂದು...ಎಷ್ಟೊಂದು ಪಕ್ವತೆ ನಿನ್ನಲ್ಲಿ ಅಬ್ಬಾ!! ಎಷ್ಟೊಂದು ಪ್ರೀತಿ
ನಿನಗೆ  ನನ್ನ ಮೇಲೆ....ಇದ್ದದ್ದರಲ್ಲೇ ತೃಪ್ತಿಯಾಗಿ ಖುಷಿ,ಸಮೃದ್ಧಿ ಇಬ್ಬರನ್ನೂ
ಕೊಟ್ಟೆ,ಅವರಿಬ್ಬರಿಗೆ ನೀ ಹೆಸರಿಟ್ಟಾಗ ಟ್ರೆಂಡಿಯಾಗಿದೆ ಎಂದಿದ್ದೆ,ಈಗ ತಿಳಿತಾ ಇದೆ
ಅವೆರಡನ್ನೂ ಈ ನಿನ್ನ 'ಜೀ'(ವನ್) ಜೀವನದಲ್ಲಿ ಸದಾ ಇರಲಿ ಎಂಬ ಹಾರೈಕೆಯಾಗಿತ್ತು
ಅಲ್ವಾ??.. ನೀನಿಲ್ಲದ ಮೊದಲ "ವ್ಯಾಲೆನ್ಟೈನ್ಸ್ ಡೇ" ಇದು ಅದಕ್ಕೆ ನೋಡು ಈ
ಪತ್ರ,ನಿನಗಾಗಿ ಬರೆದ ಮೊದಲ ಪ್ರೇಮ ಪತ್ರ ...ನಿನ್ನಷ್ಟು ಜೀವನವನ್ನು ಅರ್ಥೈಸಿಲ್ಲ
ನಾನು ಯಾವಾಗಲು ಹೇಳುತಿದ್ದೆ ನೀನು ಪತ್ರವೊಂದ ಬರೆಯಲು ನೀನಿರುವಾಗ ಬರೆಯಲಿಲ್ಲ..ಈಗ
ಬರೆಯುತಿದ್ದೇನೆ ...  ನಿನ್ನಿಷ್ಟದಂತೆ ಕೊನೆಗೂ ಪ್ರೇಮ ಪತ್ರ ಬರೆದೆ
ಕಣೆ......ಪ್ರೇಮಿಗಳ ದಿನದ ಹಾರ್ದಿಕ ಶುಭಾಶಯಗಳು,ಹ್ಯಾಪಿ ವ್ಯಾಲೆನ್ಟೈನ್ಸ್ ಡೇ
ಸಂತೃಪ್ತಿ ಅಂಡ್ ಐ ಲವ್ ಯು .....ಅಂದುಕೊಂಡಿದ್ವಿ ಅಲ್ವಾ ದಿನಕ್ಕೊಂದು ಬಾರಿ ಏನೇ
ಆದರೂ ಇದನ್ನು ಹೇಳಲೇ ಬೇಕಂತ  ಈಗಲೂ ನಾನೊಂತು ತಪ್ಪಿಸಿಲ್ಲ ...ನೀನೂ ತಪ್ಪಿಸಿರಲ್ಲ
ಅಂದುಕೊಂಡಿದ್ದೀನಿ...     ...ಹೆಸರಿಗೆ ತಕ್ಕಂತೆ ಸಂಪೂರ್ಣತೆ ಮತ್ತು ತೃಪ್ತಿಯನ್ನು
ತಂದು ಕೊಟ್ಟಿ ದಕ್ಕಾಗಿ  ಮತ್ತೊಮ್ಮೆ ಥ್ಯಾಂಕ್ಸ್...ನೀನಿಲ್ಲದೆ ಜೀವನ ಮತ್ತೆ
ಅಪೂರ್ಣತೆಯೆಡೆಗೆ ವಾಲಿದೆ,ಆದರೆ ನೀನಿದ್ದ ನನ್ನ ಪೂರ್ಣತೆಯ ಜೀವನ ಮರೆತುಹೋಗುವ ತನಕ
ಬರೆಯುವೆ..ನಿನಗಾಗಿ ಪತ್ರಗಳನ್ನು ಬರೆಯುತ್ತಲೇ ಇರುವೆ..ಹೌದು ನಿನ್ನಾಣೆ ತೃಪ್ತಿ...


                                                                                                        
                                                                                                                 ಜೀವನ್....

                                  

Friday 11 May 2012

..ಸಂತೃಪ್ತಿ...



.



 "ಜಾಣಮರಿ ಅಲ್ವಾ ನೀನು, ತಿನ್ನು ಪುಟ್ಟ ಪ್ಲೀಸ್ ಇದೊಂದು ತುತ್ತು....", ಎಂದು ತನ್ನ ಮಗಳ ಬಾಯಿಗೆ ದೋಸೆ ತುರುಕುತ್ತಾ ಹೇಳಿದಳು ನಿಯತಿ.ಬೇಗ ಬೇಗ ಮಗಳನ್ನು ಶಾಲೆಗೆ  ಹೊರಡಿಸಿ ಬಸ್ ಹತ್ತಿಸಿ ಬಂದು ಸೋಫಾ ಮೇಲೆ ಒರಗಿದ್ದಷ್ಟೇ ಫೋನ್ ಅಳಲಾರಂಭಿಸಿತು. 'ಹಲೋ... ' ಎಂದಿದ್ದಷ್ಟೇ ಆ ಕಡೆಯಿಂದ " ಹಲೋ ನಾನು ಕಣೆ ಅನನ್ಯ... ಹೇಗಿದ್ದೀಯ? ನಾನು ಹೇಳಿದ್ದೆನಲ್ಲ ನೀನು ಪುಟ್ಟಿ ಇಲ್ಲಿಗೆ ,ಲಂಡನ್ಗೆ ಬಾರೋ ವಿಷ್ಯ, ಟಿಕೆಟ್ ಬುಕ್ ಆಗಿದೆ ವೀಸಾ ಬರಬಹುದು ಇವತ್ತು . ಪುಟ್ಟಿಯ ಸ್ಕೂಲ್  ವ್ಯವಸ್ತೆಯೂ ಆಯಿತು ಬೇಗ ಪ್ಯಾಕಿಂಗ್ ಶುರು ಮಾಡು .. ಲಂಡನ್ ಏರ್ ಪೋರ್ಟ್ ನಲ್ಲಿ ಸಿಗೋಣ ಸರಿನಾ? ಇಡ್ತೀನಿ ನನ್ನ ಕ್ಯಾಬ್ ಬಂತು ಬೈ ಟೇಕ್ ಕೇರ್ .." ಆ ಕಡೆಯಿಂದ ಬೀಪ್ ಶಬ್ದ ಬರಲಾರಂಭಿಸಿತು.ಫೋನ್ ಇಟ್ಟ ನಿಯತಿ ಏಕೋ ಎದ್ದು ಕನ್ನಡಿ ಮುಂದೆ ನಿಂತಳು.ಅದೇ ಮುಖ,ಅದೇ ಕಣ್ಣೇರು ಬತ್ತಿದ ಕಂಗಳು ,ಅದೇ ಬಣ್ಣವಿಲ್ಲದ ಹಣೆ,ಖಾಲಿಯಾದ ಕುತ್ತಿಗೆ..ಅವಳನ್ನು  ಯೋಚನೆಗಳು  ಭೂತ ಕಾಲಕ್ಕೆ ಇವಲಿಷ್ಟವಿಲ್ಲದೆಯೇ ಕರೆದೊಯ್ಯಿತು..ನಿಯತಿ ,ಅನನ್ಯ ಪ್ರಾಣ ಸ್ನೇಹಿತೆಯರು.ಉದಾಹರಣೆ ಕೊಡುವಂತ  ಸ್ನೇಹ  ಅವರದು . ಅನನ್ಯಾಳಿಗೆ  ತನ್ನ ಗೆಳತಿ ತನ್ನೊಂದಿಗೆ ಇರಲೆಂದು ತನ್ನ ಅಣ್ಣನಿಗೆ ಕೊಟ್ಟು ಮದುವೆ ಮಾಡಿಸಿದಳು .ದೊಡ್ಡವರ ತಕರಾರು ಏನು ಇಲ್ಲದಿದ್ದರಿಂದ ಮದುವೆಯೂ ಸುಸೂತ್ರವಾಗೆ ನಡೆಯಿತು.ವಿವಾಹವಾಗಿ ಎರಡು ವರುಷಗಳಷ್ಟೇ, ಎಲ್ಲಾ ವಿಧಿಯಾಟ ನಿಯತಿಯ ಗಂಡ ಕಾರ್ ದುರಂತವೊಂದರಲ್ಲಿ  ಇವರೆನ್ನೆಲ್ಲಾ ಬಿಟ್ಟು ಬರಲಾರದಷ್ಟು ದೂರ ಹೋದ.ನಿಯತಿಗೊಂತು ಆಗ ಅನನ್ಯಳಲ್ಲದೆ ಬೇರಾರೂ ಇರಲಿಲ್ಲ .ಇಬ್ಬರೂ ಅವನ ಯೋಚನೆಯಲ್ಲೇ ಒಂದು ವರ್ಷ ಹೇಗೋ ದೂಡಿದ್ದರು.  ಅನನ್ಯಾಳಿಗೆ  ಆಗ ಲಂಡನ್ ನಲ್ಲಿ ಒಳ್ಳೆ ಕೆಲಸವೊಂದು ಸಿಕ್ಕಿ ನಿಯತಿಗೂ ಅವಳ ಮಗುವಿಗೂ ಇಲ್ಲಿ ಎಲ್ಲಾ ವ್ಯವಸ್ಥೆ  ಮಾಡಿ ಹೋಗಿದ್ದಳು.ಕುಕ್ಕರಿನ ಸದ್ದಿಗೆ ಬರುತ್ತಿದ್ದ ಕಣ್ಣೀರನ್ನು ಒರೆಸಿಕೊಳ್ಳುತ್ತಾ ನಿಯತಿ ಅಡುಗೆ ಮನೆಯತ್ತ ಓಡಿದಳು.ನಿಯತಿಯ ಯೋಚನೆಗಳು ಇಲ್ಲಿ ಹೀಗಾದರೆ ಅಲ್ಲಿ ಅನನ್ಯಾ ಕುಉದ ಕ್ಯಾಬ್ನಲ್ಲಿ ಕೂತು ಇವರದೇ ಯೋಚನೆ ಮಾಡುತ್ತಿದ್ದಳು .ಅವಳಿಗೆ ಕಾಡುತ್ತಿದ್ದ ದುಃಖ ಒಂದೇ ತನ್ನ ಗೆಳತಿಯ ಜೀವನಕ್ಕೆ ತಾನೇ ಮುಳ್ಳಾದೆನಲ್ಲಾ  ಎಂಬುದು..ತಾನು ಅಂದು ಅವಳನ್ನು ತನ್ನ ಅಣ್ಣನೊಂದಿಗೆ ಮದುವೆ ಮಾಡಿಸದಿದ್ದರೆ ಹೀಗೆ ದುಃಖದ ಸಾಗರದಲ್ಲಿ ಈಜುವ ಅವಶ್ಯಕತೆ ಇಲ್ಲವೆಂದು..
            ಕೊನೆಗೂ ಆ ದಿನ ಬಂದೆ ಬಿಟ್ಟಿತು. ನಿಯತಿ ಮತ್ತು ಪುಟ್ಟಿ ಇಬ್ಬರೂ ಲಂಡನ್ನಿನ ಏರ್ ಪೋರ್ಟ್ ಗೆ ಬಂದಿಳಿದರು. ಇವರು ಬರುವ ಮುನ್ನವೇ ಅನನ್ಯ ಇವರಿಗಾಗಿ ಕಾಯುತ್ತಾ ನಿಂತಿದ್ದಳು.ಎಷ್ಟೋ ದಿನದ ಬಳಿಕ ನೋಡುತ್ತಿದ್ದರಿಂದ ಇಬ್ಬರ ಕಣ್ಣಿನಿಂದಲೂ ಸುರಿಯುತಿದ್ದ  ನೀರು ಮಿಲನದ ಸಂತೋಷವನ್ನು ವ್ಯಕ್ತ ಪಡಿಸುತಿತ್ತು. ಪುಟ್ಟಿಯನ್ನು ಅನನ್ಯಾಳೆ ಎತ್ತುಕೊಂಡು ಕಾದಿರಿಸಿದ್ದ ಕ್ಯಬ್ನಲ್ಲಿ ಕೂತರು. ಮನೆ ತಲುಪಿ ಅರ್ಧ ಘಂಟೆ ಆದಾಗ ಅನನ್ಯಾಳ ಮನೆ ಡೋರ್ ಬೆಲ್ ಸದ್ದಾಯಿತು.ಬಾಗಿಲು ತೆರೆಯುತ್ತಲೇ "ಹಾಯ್ ನಕುಲ್  ಕಮ್   ಕಮ್ ಇನ್ ಸೈಡ್ " ಎನ್ನುತ್ತಾ ನಿಯತಿಯ ಕಡೆ ತಿರುಗಿ "ನಿಯತಿ ಹಿ ಇಸ್  ನಕುಲ್  ನನ್ನೊಟ್ಟಿಗೆ ಕೆಲಸ ಮಾಡ್ತಾನೆ ಮೈ ಬೆಸ್ಟ್ ಫ್ರೆಂಡ್ ಇನ್ ಲಂಡನ್" ಎಂದು ಅವನ ಕಡೆ ತಿರುಗಿ  , " ನಕುಲ್  ದಿಸ್ ಇಸ್ ನಿಯತಿ ನಾನ್ ಹೇಳಿದ್ನಲ್ಲ ಅತ್ತಿಗೆ ಕಮ್ ಫ್ರೆಂಡ್ ಅಂತ ಇವಳೇ " ಅವರಿಬ್ಬರೂ ಒಬ್ಬರ ಮುಖ ಒಬ್ಬರು ನೋಡಿ ಹಾಯ್ ಹೇಳಿದರು. "ಒಂದ್ ನಿಮಿಷ ಈಗಲೇ ಕಾಫಿ ತರ್ತೀನಿ ಮಾತಾಡ್ತಾ ಇರಿ ",ಎಂದು ಅಡುಗೆ ಮನೆಯತ್ತ ನಡೆದಳು ಅನನ್ಯ.ಮೂವರು ಕಾಫಿ ಸವಿಯುತ್ತಾ ಹರಟುತಿದ್ದಾಗ ಅವನಿಗೆ ಕೆಲಸದ ಕರೆ ಬಂದು ಹೊರಟು ಹೋದನು.ಅನನ್ಯ ನಿಯತಿ ಇಬ್ಬರೂ ಅಡುಗೆ ಮನೆಯತ್ತ ಹೊರಟರು.ಎಲ್ಲಾ ಹೊಸ ವಾತಾವರಣ ನಿಯತಿಯ ಬದುಕಿನಲ್ಲಿ ನವ ಚೈತನ್ಯ  ತಂದಿತ್ತು. ಬದುಕುವುದನ್ನೇ ಮರೆತ ಅವಳು ಸ್ವಲ್ಪ ಗೆಳುವಾಗಿರುವುದನ್ನು ಕಂಡ ಅನನ್ಯಾಗೊಂತೂ ಎಲ್ಲಿಲ್ಲದ ಸಂತೋಷ..ಅನನ್ಯಾಳ ಗೆಳೆಯನಾಗಿದ್ದ ನಕುಲ್ ನಿಯತಿಗೂ ಆಪ್ತನಾಗುವುದರಲ್ಲಿ ಸಮಯ ಹಿಡಿಯಲಿಲ್ಲ .ಅನನ್ಯ ಕೆಲಸದಲ್ಲಿ ಮುಳುಗಿದ್ದಾಗ ನಿಯತಿಗೆ ಊರು ತೋರಿಸಿದ್ದು ಇವನೇ..ಅವಲಿಲ್ಲದ್ದಾಗ ಇವಳಿಗೆ ಜೋತೆಯಾಗಿದ್ದವನೂ ಇವನೇ.ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದಕ್ಕೆ ಹಲವ್ವಾರು  ಸನ್ನಿವೇಶಗಳೂ ಬಂದಿದ್ದವು.ಹಾಗೆ ಒಬ್ಬರನೊಬ್ಬರು ಹಚ್ಚಿ ಕೊಳ್ಳುವುದಕ್ಕೂ ಸಮಯ ಹಿಡಿಯಲಿಲ್ಲ.
                             ಅಂದು ನಕುಲ್ ನ ಹುಟ್ಟುಹಬ್ಬವಿತ್ತು .ನಿಯತಿ ಅನನ್ಯಾರನ್ನು ಅವನು ಖುದ್ದಾಗಿ ಅವನ ಪಾರ್ಟಿಗೆ ಕರೆದಿದ್ದ.ಪಾರ್ಟಿ ಬಹಳ ಜೋರಾಗೆ ಹಮ್ಮಿಕೊಂಡಿದ್ದ.ಪಾರ್ಟಿಯ ನಡುವೆ ಅನನ್ಯಾಳನ್ನು ಕರೆದು ,"ನಿನ್ನ ಅತ್ತಿಗೆಯನ್ನು ನಾನು ಬಹಳ ಇಷ್ಟಪಡುತ್ತೇನೆ ಅವಳನ್ನು ನಾನು ಮದುವೆಯಾಗಬಹುದ??"ಎಂದು ಕೇಳಿದ ಅವಳು ಕಕ್ಕಾಬಿಕ್ಕಿಯಾಗಿ "ಆದರೆ ನಿಯತಿ...",ಇನ್ನೂ ಅವಳು ಮುಗಿಸಿಯೇ ಇರಲಿಲ್ಲ ಅವನು ನಿಯತಿಯನ್ನು ಕರೆದು ಕೇಳಿಯೇ ಬಿಟ್ಟ. ನಿಯತಿಯ ಕಣ್ಣಲ್ಲಿ ಮಿಂಚಿದ ಸಂತೋಷ , ಎಷ್ಟೋ ವರ್ಷಗಳಿಂದ ಹಾತೊರೆಯುತ್ತಿದ್ದ ಪ್ರೀತಿ ಸಿಕ್ಕ ಖುಷಿ ಕನ್ನಿನಿದ ಹರಿಯಿತು ಸರಿ ಎಂದು ತಲೆಯಾಡಿಸುತ್ತಾ ಅನನ್ಯಾಳನ್ನು ತಬ್ಬಿದಳು ಇಬ್ಬರ ಸಂತೋಷದ ಧಾರೆ ಹರಿದಮೇಲೆ ಅನನ್ಯ,"ಶಿ ಇಸ್ ಪರ್ ಫೆಕ್ಟ್
ಫಾರ್ ಯು ಮದುವೆ ಯಾವಾಗ ಇಟ್ಟುಕೊಳ್ಳೋಣ?" ಎಂದಳು ಕಣ್ಣೇರು ಒರೆಸುತ್ತಾ...ಅವನು 'ಇವತ್ತೇ..' ಎನ್ನುತ್ತಾ ಉಂಗುರ ತೆಗೆದು ತೊಡಿಸಿಯೇ ಬಿಟ್ಟ. ಅತಿಥಿಗಳೆಲ್ಲ ಬಂದು ಇಬ್ಬರಿಗೂ ಶುಭಾಶಯ ಹೇಳತೊಡಗಿದರು. ಎಲ್ಲಾ ಮುಗಿದ ಮೇಲೆ ಅನನ್ಯಾ ನಿಯತಿ ಹಾಗು ಪುಟ್ಟಿ ಎಲ್ಲರೂ ಮನೆಗೆ ಹೊರಟರು...ನಿಯತಿಯನ್ನು ಮನೆಯ ಬಾಗಿಲ ಬಳಿ ಬಿಟ್ಟು ,ಅನನ್ಯಾ  " ತಗೋ ಮನೆ ಬೀಗ ,ನಾನೀಗ ಬರ್ತೀನಿ ಏನೋ ಕೆಲಸ ನೆನಪಾಯಿತು ಹುಷಾರು ",ಎಂದು ಮಲಗಿದ್ದ ಪುಟ್ಟಿಯನ್ನು ಅವಳ ಭುಜಕ್ಕೆ ಹಾಕಿ ಕಾರ್ ತೆಗೆದುಕೊಂಡು ಹೊರಟಳು...ಕಾರ್ ಲಂಡನ್ ನಗರ ಪ್ರದೇಶ ಬಿಟ್ಟು ಓಡುತ್ತಲೇ ಇತ್ತು,ಒಂದು ಪ್ರಶಾಂತ ನದಿ ದಂಡೆಯ ಬಳಿ ನಿಲ್ಲಿಸಿ ಕಾರಿನಿಂದ ಕೆಳಗಿಳಿದು ನಿಂತಳು. ಡಿಕ್ಕಿಯಲ್ಲಿಟ್ಟಿದ್ದ   ಉಡುಗೊರೆಯನ್ನು ಹೊರತೆಗೆದಳು.ಅದರೊಂದಿಗಿದ್ದ ಗ್ರೀಟಿಂಗ್ ಕಾರ್ಡನ್ನು ತೆಗೆದು ಇಣುಕಿದಳು ತಾನೇ ನಕುಲ್ ಗಾಗಿ  ರಾತ್ರಿಯಲ್ಲಿ ಕುಳಿತು ಬರೆದ ಮುದ್ದಾದ ಅಕ್ಷರದ ಪತ್ರ ,ಅದರ ಸಮೇತ ಕ್ಷಣಾರ್ಧದಲ್ಲಿ ಹರಿದು ಎಸೆದಳು . ಅವನಿಗೆನ್ದೆ ತೆಗೆದುಕೊಂಡ ಹುಡುಗ  ಹುಡುಗಿಯ ಮೂರ್ತಿ ಅದರ ಮೇಲೆ ಬರೆದಿದ್ದ ಮುಉರು ಪದಗಳ ಪ್ರೀತಿಯ ಮಾತು ಎಲ್ಲವನ್ನೂ ಎದೆಗೊತ್ತಿ ಮಗುವಂತೆ ಅಳಲಾರಂಭಿಸಿದಳು. ಕನೀರ ಕೊಡಿ ಮುಗಿದ ನಂತರ ಅವಳೇ ಸಮಾಧಾನ ತಂದುಕೊಂಡು ನದಿಯ ಆ ಕಡೆ ಕಾಣುತಿದ್ದ ಬೆಳಕಿನ ಕಟ್ಟಡಗಳ ಪ್ರತಿಬಿಂಬದ ಕಡೆ ದೃಷ್ಟಿ ನೆಟ್ಟಳು .ಆ ಕಣ್ಣಲ್ಲಿದ್ದ ನೋವನ್ನು ಯಾವುದೋ ಒಂದು ಮನದ ಮೂಲೆಯಲ್ಲಿದ್ದ ಖುಷಿ ಆವರಿಸಲಾರಂಭಿಸಿತು. ಅದೇ ಅವಳ ಪ್ರಾಣ ಸ್ನೇಹಿತೆಗೆ ಹೊಸ ಬದುಕು ಸಿಕ್ಕ ಖುಷಿ ಪುಟ್ಟಿಗೆ  ಒಳ್ಳೆ ತಂದೆ ಸಿಕ್ಕ ಖುಷಿ... ಎರಡರ ನಡುವೆ ಇವಳ ದುಃಖ ಅಣುವಾಗಿ ಬಿಟ್ಟಿತು . ತಾನು ಪ್ರೀತಿಸಿದ ನಕುಲ್ ನನ್ನು ತನ್ನ ಮನಸ್ಸಿನ ಅರಮನೆಯಿಂದ ಕಿತ್ತಿಡಲಾಗದೆ ಆ ಮನದ ಕೊನೆಗೆ ಕೀಲಿಕೈ ಇಲ್ಲದ ಬೀಗ ಜಡಿದು ಮತ್ತೆ ಕಾರ್ ಹತ್ತಿದಳು.........  

Sunday 5 February 2012

...ಮುಂಗುರಳ ಸುಂದರಿ...


ಪ್ರಾಜೆಕ್ಟ್ ಎಲ್ಲಾ  ಮುಗಿಸಿ ಬೆಂಗಳೂರಿಂದ ಶಿವಮೊಗ್ಗೆಗೆ ರಾತ್ರಿ ಹನ್ನೊಂದು ಗಂಟೆಗೆ ಬಸ್ ಹತ್ತಿದೆ.ನನ್ನ ಸೀಟ್ ಮೊದಲೇ ರಿಸೆರ್ವ್ ಮಾಡಿದ್ದರಿಂದ ನಿಗದಿತವಾದ ಸ್ಥಳದಲ್ಲಿ ಹೋಗಿ ಕುಳಿತೆ.ಅದು ಐರಾವತ ಬಸ್ ಆದ್ದರಿಂದ 
ಹೆಸರೇ ಸುಉಚಿಸುವಂತೆ ಬಹಳ ಎತ್ತರ ಹಾಗು ಸುಂದರವಾಗಿತ್ತು . ಅಲ್ಲಿ ಎಲ್ಲಾ ರಿಸೆರ್ವ್ ಮಾಡಿದ್ದ ಸೀಟ್ ಗಳೇ ಎಲ್ಲ ಪ್ರಯಾಣಿಕರೂ ತಮ್ಮ ತಮ್ಮ ಸ್ಥಳಗಳಲ್ಲಿ ಕುಳಿತರು. ನನ್ನ ಪಕ್ಕದ ಸೀಟ್ ಮಾತ್ರ ಖಾಲಿ ಇತ್ತು. ಎಕ್ಸ್ ಪ್ರೆಸ್ 
ಬಸ್ ಆದ್ದರಿಂದ ಕೆಲವೇ ಊರುಗಳಲ್ಲಿ ನಿಲ್ಲಿಸುವುದೆಂದು  ಕಂಡಕ್ಟರ್  ಹೇಳಿದ್ದರಿಂದ ಮುಂದೆ ಯಾರಾದರೂ ಹತ್ತಬಹುದೆಂದುಕೊಂಡು ಮೊಬೈಲಿಗೆ ಇಯರ್ ಫೋನ್ ಸಿಕ್ಕಿಸಿ ಹಾಡು ಕೇಳುತ್ತಾ ಹಾಗೆ ಸೀಟನ್ನು ಹಿಂದಕ್ಕೊರಗಿಸಿದೆ.
ಮನಸ್ಸು ಹಾಡಿನಲ್ಲಿ ಮೈಮರೆತು ಕಣ್ಣುಗಳು ಕನಸಿನ ಲೋಕಕ್ಕೆ ಅಣಿಯಾಗತೊಡಗಿದವು  . ಒಂದೂವರೆ ಗಂಟೆ ಕಳೆದಿರಬೊಹುದು ಬಸ್ ಗೆ ಬ್ರೇಕ್ ಬಿಟ್ಟು ಹಾಗೆ ನನ್ನ ಕನಸಿಗೂ ಸಹ. ಎದ್ದು ಕಿಟಕಿಯಿಂದ ಕಣ್ಣಾಯಿಸಿದೆ ಕಟ್ಟಲು ಬಿಟ್ಟು ಬೇರೇನೂ
ಕಾಣಲಿಲ್ಲ . ಯಾವ ಊರೆಂದೂ ನೋಡಲಾಗಲಿಲ್ಲ. ಅಷ್ಟರಲ್ಲೇ ಕಂಡಕ್ಟರ್ ರೈಟ್ ಎಂದ.ಇನ್ನೇನು ಮತ್ತೆ ಕಣ್ಣು ಮುಚ್ಚಬೇಕೆನ್ನುವಷ್ಟರಲ್ಲಿ ಒಬ್ಬಳು ಹುಡುಗಿ ಬಂದು ಪಕ್ಕದಲ್ಲಿ ಕುಳಿತಳು. ನೋಡಲು ಬಹಳ ಸುಂದರಿ . ಅವಳ ಅಂದವನ್ನು ನೋಡುತ್ತ 
ಹಾಗೆ ಕುಳಿತೆ..ಅವಳು ತನ್ನ ಸಾಮಾನುಗಳನ್ನು ಕಾಲಡಿ ಇಟ್ಟು ಶಾಲು ಹೊದ್ದುಕೊಂಡು ಕುಳಿತಳು. ನನಗೆ  ಅವಳ ಬಳಿ  ಮಾತನಾಡುವ ಆಸೆಯಾಯಿತು ಹೀಗೆ ಶುರು ಮಾಡಲಿ ಎಂದು ಯೋಚಿಸುತ್ತಿರುವಾಗಲೇ ಏನೋ ಹೊಳೆದಂತಾಗಿ 
'ಯಾವ ಊರಿನಿಂದ ಹತ್ತಿದಿರಿ ?' ಎಂದೆ. ಅವಳು ಅದು ಯಾವ ಊರ ಹೆಸರು ಹೇಳಿದಳೋ ಗೊತ್ತಾಗಲಿಲ್ಲ ಧ್ವನಿ ಸಂಗೀತದಂತಿದ್ದರಿಂದ ತಿಳಿಯದಿದ್ದರೂ ಸುಮ್ಮನೆ ತಲೆಯಾಡಿಸಿದೆ. ಅವಳ ಮುಖವನ್ನೇ ನೋಡುತ್ತಾ ಇದ್ದರಿಂದಲೋ ಅವಳೇ 
ನಿಮ್ಮ ಊರು ಯಾವುದು? ಏನು ಮಾಡುತ್ತಿದ್ದೀರಾ? ಎಂದೆಲ್ಲಾ ಕೇಳಿದಳು ನಾನೂ ಮಂತ್ರಮುಗ್ಧನಂತೆ ಅವಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ಅವಳನ್ನೇ ನೋಡುತಿದ್ದೆ.. ಅವಳೂ ತಲೆಯಾಡಿಸುತ್ತಾ ಕೇಳಿಸಿ ಕೊಳ್ಳುತ್ತಿದ್ದಳು , ಮಧ್ಯ ಅವಳು ಆಕಳಿಸಿದ್ದನ್ನು ನೋಡಿ 'ನಿಮಗೆ ನಿದ್ರೆ ಬರುತ್ತಿರಬಹುದು ಮಲಗಿ' ಎಂದೆ...ಅವಳು ಮುಗುಳು ನಕ್ಕು ಕಣ್ಣು ಮುಚ್ಚಿದಳು. ಅದನ್ನೇ ಕಾಯುತ್ತಿದ್ದ ನಾನು ನಿರ್ಭಯವಾಗಿ ಅವಳನ್ನೇ ನೋಡುತ್ತಾ ಅವಳಲ್ಲೇ ಸೇರಿ ಹೋದೆ. ಅದೆಂಥ ಸುಂದರ 
ನಯನಗಳು , ಕೆಂಪಾದ ಅಧರ, ಮನ್ಮಥನ ಬಿಲ್ಲಿನಂತಿದ್ದ ಹುಬ್ಬುಗಳ ಮೇಲೆ ಅವಳ ಮುಂಗುರುಳುಗಳು ಸಂಚರಿಸುತ್ತಿದ್ದವು. ಅವಳ ಆ  ಮುಂಗುರುಳುಗಳನ್ನು ನೋಡಿಯೇ ಮಾರುಹೋಗುವರು. ಆಗಲೇ ನನ್ನ ಮೊಬೈಲಿಂದ ' ಏ ಹವಾಯೇ ಜುಲ್ಫೊಮೆ ತೇರಿ ಗುಂ ಹೋ ಜಾಯೆ ...' ಎಂಬ ಹಾಡು ಗುನುಗಿತು..ಆ ಹಾಡಿಗೂ ವಾಸ್ತವದಲ್ಲಿ ಗಾಳಿಗೆ ಚಲಿಸುತ್ತಿದ್ದ ಅವಳ ಮುಂಗುರುಳುಗಳಿಗೂ ಎಂಥಾ ಸಂಗಮ ಎಂದುಕೊಂಡು ಮತ್ತೆ ಅವಳನ್ನೇ ನೋಡಲಾರಂಭಿಸಿದೆ...ಅವಳಲ್ಲೇ ಮುಳುಗಿದ್ದ ನನಗೆ ಇದ್ದಕ್ಕಿದ್ದಹಾಗೆ ಕಂಡದ್ದು ಪಕ್ಕದ ರೋ ನ  ಐವತ್ತರ ಆಸುಪಾಸಿನ ಹೆಂಗಸು ನನ್ನನ್ನೇ ನೋಡುತ್ತಿರುವುದು..ಅವಳ ಸುಂದರತೆಯ ಮಧ್ಯ ಬಂದ ಅಡೆತಡೆಯನ್ನು ಅಷ್ಟಾಗಿ ಗಮನ ಕೊಡಲಿಲ್ಲ ನಾನು..ಸ್ವಲ್ಪ ಹೊತ್ತಿನಲ್ಲೇ ನಿದ್ರಾದೇವಿ ನನ್ನನ್ನು ಕರೆಯ ತೊಡಗಿದಳು ,ನಿದ್ರಾದೇವಿಯ  ಮಡಿಲಿಗೆ ಜಾರಿದ ನನಗೆ ಬೆಳೆಗ್ಗೆ ಐದು ಘಂಟೆಗೆ ಎಚ್ಚರವಾಯಿತು..ಇನ್ನೂ ಕಟ್ಟಲು ಕವಿದೇ ಇತ್ತು.. ಪಕ್ಕದಲ್ಲಿ ನೋಡಿದರೆ ಆ ಸುಂದರಿ ಅಲ್ಲಿರಲಿಲ್ಲ. ಅವಳ ಹೆಸರೂ ಸಹ ನಾನು ಕೇಳಿರಲಿಲ್ಲ ಎಂಬುದು ನೆನಪಾಯಿತು, ರಿಸೆರ್ವ್ ಮಾಡಿಸಿದ್ದವರ ಹೆಸರು  ಕಂಡಕ್ಟರ್ ಬಳಿ ಇದ್ದೆ ಇರುತ್ತದೆ ಆಮೇಲೆ ಕೇಳಿದರಾಯಿತೆಂದು ಕಿಟಕಿ ನೋಡುತ್ತಾ ಕುಳಿತೆ..ತುಸು ಹೊತ್ತಿನಲ್ಲೇ ಆದಿತ್ಯ ಕತ್ತಲನ್ನು ಸೀಳಿ ಬಂದ. ಶಿವಮೊಗ್ಗೆಯಲ್ಲಿ ಬಸ್ಸೂ ನಿಂತಿತು..ನನ್ನ ಲಗೇಜಿನೊಂದಿಗೆ ಎಲ್ಲರೂ ಇಳಿದ ಮೇಲೆ ಇಳಿದೆ. ಸಮಯ ವ್ಯಯ ಮಾಡದೆ ಸೀದಾ ಕಂಡಕ್ಟರ್ ಬಳಿ ಹೋಗಿ ಅವರ ಬಳಿ ಇದ್ದ ಪ್ರಯಾಣಿಕರ ಮಾಹಿತಿ ಪುಸ್ತಕ ಕೇಳಿ ಪಡೆದೆ .ಮೊದಲು ಹಿಂಜರಿದರೂ ಕೊನೆಗೆ ಪುಸ್ತಕವನ್ನು ನನ್ನ ಕಯ್ಯಲ್ಲಿತ್ತರು ,ಅವಳಂತೆ ಅವಳ ಹೆಸರೂ ಸುಂದರವಾಗಿರಬಹುದೆಂದು ನನ್ನ ಸೀಟ್ ಪಕ್ಕದ ಸೀಟಿನ ಹೆಸರನ್ನು ನೋಡಿದೆ..ನನ್ನ ಆಶ್ಚರ್ಯಕ್ಕೆ ಸೀಮೆಯೇ ಇರಲಿಲ್ಲ , ಏಕೆಂದರೆ ಅಲ್ಲಿದದ್ದು ಒಬ್ಬ ಗಂಡಸಿನ ಹೆಸರು....ಅವಸರ ಅವಸರವಾಗಿ ಹೋಗಿ ನಾನು ನೋಡಿದ್ದರಲ್ಲಿ ಏನೋ ತಪ್ಪಿರಬಹುದೆಂದು ಕಂಡಕ್ಟರ್ ಬಳಿ ಹೋಗಿ ಹುಡುಗಿಯ ಬಗ್ಗೆ ವಿಚಾರಿಸಿದೆ ಅದಕ್ಕವರು ಮಧ್ಯದಲ್ಲಿ ಯಾರೂ ಹತ್ತಲೇ ಇಲ್ಲ ಎಂದರು...ನನ್ನ ಎದೆ ಬಡಿತವೂ ಹಾಗೇ ಏರತೊಡಗಿತು ... ನಂಬಲಾಗದೆ ಅವಳ ಬಗ್ಗೆ ಯೋಚಿಸುತ್ತಾ ಆಟೋ ಹತ್ತಲು ಹೊರಡುತಿದ್ದಾಗ ಮತ್ತದೇ ಐವತ್ತರ ಹೆಂಗಸು ಬಂದು 'ಏನಪ್ಪಾ ಅದು ಯಾರ ಹತ್ತಿರ ಅಷ್ಟೊತ್ತು ಮಾತನಾಡುತಿದ್ದೆ?ಫೋನಿನಲ್ಲಿ ಮತಾಡುತಿದ್ದೆಯ ಅಥವಾ  ನಿದ್ದೇಲಿ ಕನವರಿಸುತಿದ್ದೆಯಾ? ನಿನ್ನ ಪಕ್ಕದ ಸೀಟನ್ನೇ ನೋಡುತಿದ್ದೆಯಲ್ಲ? ಏನಾದರು ತೊಂದರೆ ಆಗಿತ್ತ?' ಎಂದು ಒಂದರ ಮೇಲೊಂದು ಪ್ರಶ್ನೆ ಕೇಳಿ ದಾಗಲೊಂತು ನನಗೆ ಭೂಮಿ ಅಲ್ಲೇ ಬಾಯಿ ಬಿಡಬಾರದೇ ಎನಿಸಿತು..ಹೇಗೋ ಸಮಾಧಾನದ ಉತ್ತರಗಳನ್ನು ನೀಡಿ ಹೆಂಗಸನ್ನು ಅಟ್ಟಿದೆ..ನಾನು ಏನೇ ಹೇಳಿದರೂ ಯಾರು ನಂಬುತ್ತಾರೆ?ಅದೂ ಆ ಹುಡುಗು ಅಲ್ಲ ಅಲ್ಲ ಮುಂಗುರುಳ ಸುಂದರುಯ ಬಗ್ಗೆ ...ನಿಜ ಹೇಳಬೇಕೆಂದರೆ ನನಗೆ ಇನ್ನೂ ಆ ಭಯಾನಕ ಪ್ರಯಾಣವನ್ನು ನೆನಪಿಸಿಕೊಂಡರೆ ಕಳು ಕುಸಿದಂತಾಗುತ್ತದೆ.. ಅದೇನು ನನ್ನ ಭ್ರಮೆಯೋ?ಅಥವಾ........ಈ ಸಂಗತಿ ನದೆದಾಗಿನಿಂದಲೂ ನಾನು ರಾತ್ರಿ ಪ್ರಯಾಣಿಸುವುದನ್ನೇ ಬ್ರೇಕ್ ಮಾಡಿದೆ......